Menu

ನಿಮಗೆಲ್ಲರಿಗೂ “ಆನಂದವನ”ಕ್ಕೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ಅರೆ ಏನಿದು ಆನಂದವನ? ಸಹಜವಾಗಿ ನಿಮ್ಮಲ್ಲಿ ಅಚ್ಚರಿ ಮೂಡಿರಬಹುದು ಅಲ್ಲವೇ? ಹೌದು ಕೆಲವೇ ನಿಮಿಷಗಳಲ್ಲಿ ನಾವು ಆನಂದವನದೊಳಗೆ ಮಾನಸಿಕವಾಗಿ ಪ್ರವೇಶಿಸುತ್ತಿದ್ದೇವೆ.

ಆನಂದವನದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ವನ ಎಂದಾಕ್ಷಣ ನಮ್ಮ ಕಣ್ಣೆದುರು ತುಂಬಿಕೊಳ್ಳುವುದು ಹಸಿರು. ಬೀಜದಿಂದ . . . . ಸಸಿಯಾಗಿ . . . . ಗಿಡವಾಗಿ  . . . .  ಹಲವು ಹರವುಗಳ ಹೂವು ಹಣ್ಣುಗಳ ಮರವಾಗಿ, ಅನೇಕ ಬೀಜಗಳಿಗೆ ಕಾರಣವಾಗಿ, ಇರುವವರೆಗೂ ನೆರಳಾಗಿ, ನಿರಂತರವೂ ಉಪಯುಕ್ತವಾಗುವ ಈ ಮರಗಳು ನಿತ್ಯನೂತನ ಹಾಗೂ ನಮ್ಮ ಭೂಮಿಯ ಹಸಿರಿಗೂ ನಮ್ಮೆಲ್ಲರ ಉಸಿರಿಗೂ ಕಾರಣ.

ಇಂತಹ ಮರ ಗಿಡಗಳ ಸಮೂಹ ಒಂದು ವನ. ಅಂದರೆ ಅನೇಕ ಪರಿಪೂರ್ಣತೆಗಳ ಆಗರ. ನಮ್ಮ ಮನುಷ್ಯಜೀವನವೂ ಹಾಗೆ ಪರಿಪೂರ್ಣವಾಗಬೇಕಲ್ಲವೇ? ನಾವು … ನೀವು … ನಮ್ಮ ಮುಂದಿನ ಪೀಳಿಗೆ. ಹೀಗೆ ನಾವೆಲ್ಲ ಸೇರಿದಾಗ ಆ ಸಮೂಹವು ಪೂರ್ಣತೆಯ ವನದಂತಾಗುವುದಾದರೆ ಎಷ್ಟು ಚಂದ ಅಲ್ಲವೇ? ನಾವು ನೀವೆಲ್ಲ ಸೇರಿ ಸಾರ್ಥಕ ಜೀವನದ ಅಂಥದೊಂದು ಪೂರ್ಣವಾದ ವನ ನಿರ್ಮಿಸಲು ಸಾಧ್ಯ ಅಲ್ಲವೇ? ಹೌದು.

ಜೀಜವು ಹೇಗೋ ಹಾಗೆ ಮಕ್ಕಳ ಮನಸ್ಸು. ಇದಕ್ಕೆ ಸಾಂಸ್ಕೃತಿಕ, ಹಾಗೂ ಆಧ್ಯಾತ್ಮಿಕ ಮೌಲ್ಯಗಳ ನೀರನ್ನು ಆಧುನಿಕ ಶಿಕ್ಷಣವೆಂಬ ಗೊಬ್ಬರವನ್ನು ಧಾರೆಯೆರೆಯಬೇಕು.  ಗಿಡಗಳಿಂದ ಕೀಟಗಳನ್ನು ದೂರಪಡಿಸಬೇಕು. ಹಾಗಾದಲ್ಲಿ ನಮ್ಮ ನಿಮ್ಮೆಲ್ಲರ ಮಕ್ಕಳು ಪರಿಪೂರ್ಣ ಫಲಗಳನ್ನು ಕೊಡುವ ಮರದಂತೆ ಅಜರಾಮರರಾಗುತ್ತಾರೆ. ಅಂತಹ ಅಜರ-ಅಮರ ವೃಕ್ಷಗಳ ವೃಂದ ನಾಡಿಗೆ ಆನಂದ ಕೊಡುವ ಆನಂದವನವಾಗುತ್ತದೆ.

ಇಂತಹ ಒಂದು ವನವನ್ನು ಸಮಾಜವೇ ಬೆಳೆಸಬೇಕು. ಅದು ನಮ್ಮ ನಿಮ್ಮೆಲ್ಲರ ಹೊಣೆ. ಅಂಥದೊಂದು ವನ ಬೆಳೆಸಬೇಕೆಂಬ ಹೆಬ್ಬಯಕೆಯಿಂದ ನಾವು ಇಂದು ನಿಮ್ಮೆದುರು ಬದ್ಧರಾಗಿ ನಿಂತಿದ್ದೇವೆ; ರೈತರಂತೆ. ನಮ್ಮೆದುರು ಸಾಕಷ್ಟು ಬೀಜರೂಪದ ಚಿಣ್ಣರಿದ್ದಾರೆ. ಆದರೆ ಬೆಳೆಯಲು ಕೃಷಿಭೂಮಿಯ ಅಗತ್ಯವಿದೆ. ಬೀಜವು ನೆಲೆಯೂರಲು ನೆಲವು ಬೇಕು. ಬೆಳೆದಂತೆ ಹರಡಿಕೊಳ್ಳುವಷ್ಟು ವಿಶಾಲವಾಗಿರಬೇಕು. ಆ ವಿಶಾಲ ಭೂಮಿಗೆ ತಕ್ಕಷ್ಟು ನೀರು ಬೇಕು, ನೇಗಿಲು ಬೇಕು. ಅದನ್ನು ಸಮಾಜವು ಕಲ್ಪಿಸಿಕೊಡಬೇಕು. ಹೌದು. ನಿಮಗೆಲ್ಲ ಗೊತ್ತಿರುವಂತೆ ಪೂರ್ಣಪ್ರಮತಿ ಎಂಬ ಅಭಿಯಾನದೊಂದಿಗೆ ನಾವು ಮಾದರಿಯ ಶಿಕ್ಷಣ ರಂಗದಲ್ಲಿ ಅಡಿಯಿಟ್ಟಿದ್ದೇವೆ.

ಆಧುನಿಕತೆಯಲ್ಲಿ ಪ್ರಾಚೀನತೆಯ ಸೊಬಗನ್ನು ಬೆಸೆಯುವ ಅಭಿಲಾಷೆ. ಡಿವಿಜಿಯವರು ಹೇಳಿದ “ಹಳೆ ಬೇರು ಹೊಸ ಚಿಗುರು ಮೂಡಿರಲು ಮರ ಸೊಬಗು” ಎಂಬುದನ್ನು ನನಸಾಗಿಸಲು ಹೊರಟಿರುವ ಪ್ರಯತ್ನ. ಅದಕ್ಕಾಗಿಯೇ ಋಷಿವಾಕ್ಯದೊಡನೆ ವಿಜ್ಞಾನ ಮೇಳವಿಸಲು ತೆರೆದ ರಂಗ. ಆಧ್ಯಾತ್ಮಿಕ ಪ್ರಗತಿ, ಸಾಮಾಜಿಕ ಕಳಕಳಿ, ಮೌಲ್ಯಗಳ ಚಿಂತನೆ, ಹಾಗೂ ಕಲಾತ್ಮಕ ಭಾರತೀಯತೆಯ ಆವಿಷ್ಕಾರಕ್ಕಾಗಿ ಈ ತಳಹದಿ. ಪಾಶ್ಚಾತ್ಯ- ಭಾರತೀಯ, ಆಧುನಿಕ – ಪ್ರಾಚೀನ, ಆರ್ಥಿಕ – ಸಾಮಾಜಿಕ, ಜಡವಿದ್ಯೆ – ಕಲಾರಸ ಹಾಗೂ ಸ್ಪರ್ಧೆ – ಆಧ್ಯಾತ್ಮಗಳ ದ್ವಂದ್ವವನ್ನು ಬೆಸೆದು ಒಂದೆಡೆಯಲ್ಲಿ ಹೊರ-ಒಳ ಶಿಕ್ಷಣಪದ್ಧತಿಗಳನ್ನು ಜೋಡಿಸುವ ವಿಶಿಷ್ಟ ಕಲ್ಪನೆ. ಇಂತಹ ಸಮನ್ವಿತ ಶಿಕ್ಷಣಕ್ಕೊಂದು ಆಧಾರ ಪೂರ್ಣಪ್ರಮತಿ.

ಇಲ್ಲಿ ಸಂಸ್ಕೃತ, ಜೀವನವಿದ್ಯೆ, ತತ್ತ್ವದರ್ಶನ, ಪರಂಪರೆ, ಕಲೆ ಮೊದಲಾದ ನಿತ್ಯನೂತನ ವಿದ್ಯೆಗಳ ಜೊತೆಗೆ ಗಣಿತ, ವಿಜ್ಞಾನ, ವ್ಯವಹಾರ ಮೊದಲಾದ ಪ್ರಸ್ತುತ ವಿದ್ಯೆಗಳನ್ನು ಜೋಡಿಸಿ ಎಳೆಯ ಮಕ್ಕಳ ಬುದ್ಧಿಯ ಪೂರ್ಣ ವಿಕಾಸಕ್ಕೆ ಪ್ರಯತ್ನಿಸಲಾಗುತ್ತಿದೆ. ಆಧುನಿಕ ಕಲಿಕೆಯನ್ನು ಮೊಟಕಾಗಿಸದೆ, ಕಲಿಕೆಗೆ ಮತ್ತೆ ಭಾರತೀಯ ಚಿಲುಮೆ ತುಂಬಿ, ಅದಕ್ಕೊಂದು ಸಾಮಾಜಿಕ ಅರ್ಥ ನೀಡಿ, ಮಕ್ಕಳ ಪಕ್ವತೆಗೆ ಬೆಲೆ ಕೊಡುವ ಶಿಕ್ಷಣವನ್ನು ಬೆನ್ನೇರಿ ಹೊರಟಿದೆ ಪೂರ್ಣಪ್ರಮತಿ. ಖ್ಯಾತ ಭಾರತೀಯ ವಿದ್ವಾಂಸರು, ಆಧುನಿಕ ಶಿಕ್ಷಣತಜ್ಞರು ಹಾಗೂ ಸಮಾಜ ಸೇವಕರ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವ ತಂಡ ಈ ಶಾಲೆಯನ್ನು ನಡೆಸುತ್ತಿದೆ.

ಈ ಶಾಲೆಯಲ್ಲಿ ಆಧುನಿಕ ಮುಖ್ಯವಾಹಿನಿಯ ಪಠ್ಯದ ಅನುಸಾರ ಇಂಗ್ಲೀಷ್, ಗಣಿತ, ಹಾಗೂ ವಿಜ್ಞಾನದ ವಿಷಯಗಳನ್ನು ಕಲಿತ ಮಕ್ಕಳು, ಅದರೊಟ್ಟಿಗೇ ಸಂಸ್ಕೃತದಲ್ಲಿ ಮಾತನಾಡಬಲ್ಲರು. ಭಾರತೀಯ ಗದ್ಯ-ಪದ್ಯಗಳನ್ನು ಹೊರಬಲ್ಲರು. ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳಬಲ್ಲರು. ಸಮಗ್ರ ಭಗವದ್ಗೀತೆಯನ್ನು ಅನುವಾದಿಸಬಲ್ಲರು. ಹಾಡು, ನೃತ್ಯ, ಯೋಗ ಹಾಗೂ ಚಿತ್ರಕಲೆಯೂ ಈ ಮಕ್ಕಳಿಗೆ ಸಹಜ. ಅನಾರೋಗ್ಯಕರ ಸ್ಪರ್ಧೆಯನ್ನು ಬೆಳೆಸದೇ ಗುಣಮಟ್ಟವನ್ನು ಕಾಯ್ದುಕೊಳ್ಳಲು ಇಲ್ಲಿ ಮಕ್ಕಳ ಸಂಖ್ಯೆಯೇ ಕಡಿಮೆ. ಪ್ರತಿ ತರಗತಿಗೆ ಗರಿಷ್ಠ ಹದಿನೈದು.

“ನಾವು ಪೂರ್ಣಪ್ರಮತಿಯ ಮಕ್ಕಳು. ನಮ್ಮ ಶಾಲೆ ಅನೇಕ ವಿಶೇಷಗಳ ತವರು. ಭಾಗೀರಥೀ ಜಯಂತಿ ಇಲ್ಲಿಯ ಪರಿಸರ ಹಾಗೂ ಜಲ ದಿನ. ಸೀತಾಜಯಂತಿಯನ್ನು ಮಾತೃದಿನ ಎಂದೂ ಧನ್ವಂತರಿ ಜಯಂತಿಯನ್ನು ಸಾಮಾಜಿಕ ಆರೋಗ್ಯ ದಿನ ಎಂದೂ ಆಚರಿಸುತ್ತೇವೆ. ನಮ್ಮ ಹಬ್ಬಗಳ ಪರಿಚಯದ ಜೊತೆಗೆ ನಾವು ಮಾಡಬೇಕಾದ ಸಾಮಾಜಿಕ ಕರ್ತವ್ಯಗಳನ್ನೂ ತಿಳಿಯುತ್ತೇವೆ. ಹಾಗೆಯೇ ರಾಷ್ಟ್ರೀಯ ಹಬ್ಬಗಳಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗುತ್ತೇವೆ. ಆಗಿಂದಾಗ್ಗೆ ಬೇರೊಂದು ಶಾಲೆಯ ಮಕ್ಕಳೊಡನೆ ಬೆರೆಯುತ್ತೇವೆ. ನಿಜಜೀವನದಿಂದ ಕಲಿಯಲು ಶಾಲೆಯ ಗುರುಗಳೊಡನೆ ಪ್ರವಾಸ ಕೈಗೊಳ್ಳುತ್ತೇವೆ. ಅಲ್ಲದೇ, “ಪೂರ್ಣಪ್ರಮತಿ ವಂದಾರು ವೃಂದ” ಎಂಬ ಮತ್ತೊಂದು ಗುರುವೃಂದವಿದೆ. ಇವರು ನಮಗಾಗಿ ಆಗಿಂದಾಗ್ಗೆ ದೂರದಿಂದ ಬಂದು ಪಾಠ ಮಾಡುತ್ತಾರೆ. “ಪೂರ್ಣಪ್ರಮತಿ ವ್ಯಾಖ್ಯಾ” ಎಂಬ ವಿದ್ವದ್ಗೋಷ್ಠಿಗಳನ್ನೂ ನಮ್ಮ ಶಾಲೆ ನಡೆಸುತ್ತದೆ. ವರ್ಷಕ್ಕೊಮ್ಮೆ ಸಡಗರದ ಹಬ್ಬವೊಂದಿದೆ ನಮಗಾಗಿ. ಅದೇ ಪೂರ್ಣಪ್ರಮತಿ ಉತ್ಸವ. ನಾಲ್ಕೈದು ದಿನದ ಈ ಉತ್ಸವದಲ್ಲಿ ಹಿರಿಯ ಸಾಧಕರು ಬಂದು ನಮ್ಮೊಡನೆ ಕಾಲ ಕಳೆಯುತ್ತಾರೆ. ಅದೊಂದು ಸ್ಫೂರ್ತಿಯ ಸೆಲೆ. ವರ್ಷದ ಕೊನೆಯಲ್ಲಿ “ಪೂರ್ಣಪ್ರಮತಿ ಸಮೀಕ್ಷಾ” ಎಂಬ ಮತ್ತೊಂದು ಕಾರ್ಯಕ್ರಮ. ಅದೊಂದು ಸಂವಾದ; ಮಾತುಕತೆ. ನಮ್ಮನ್ನು ಮಾತನಾಡಿಸಲು ಹೊರಗಿನಿಂದ ಸಾಧಕರು ಬಂದಿರುತ್ತಾರೆ. ನಮ್ಮ ಕಲಿಕೆಯನ್ನು ಗುರುತಿಸುತ್ತಾರೆ. ತಮ್ಮ ಅಭಿಪ್ರಾಯ ಹಾಗೂ ಸಲಹೆ ಸೂಚನೆಗಳನ್ನು ನಮ್ಮ ಶಿಕ್ಷಕರೊಡನೆ ಹಂಚಿಕೊಳ್ಳುತ್ತಾರೆ. ನಮ್ಮ ಪ್ರಗತಿಯನ್ನು ಅಪ್ಪ-ಅಮ್ಮರಿಗೆ ತಿಳಿಸಲು ಇದೂ ಒಂದು ಸೂಚಕ. ಎಲ್ಲಕ್ಕಿಂತ ಸಂತಸದ ಸಂಗತಿಯೆಂದರೆ ನಮಗಿಲ್ಲಿ ಪರೀಕ್ಷೆಯ ಭಯವಿಲ್ಲ. ಶಿಕ್ಷೆಯ ಭಯವಿಲ್ಲ. ಮಾರ್ಕ್ಸಿನ ಗೋಜಿಲ್ಲ. ನಲಿಯುತ್ತಾ ಕಲಿಯುವ ಆನಂದ. ಓ ದೇವ! ನಾವೇ ಭಾಗ್ಯಶಾಲಿಗಳು”

ಪೂರ್ವಪ್ರಾಥಮಿಕ ಮಟ್ಟದಿಂದ ಆರಂಭಗೊಂಡಿರುವ ಈ ಶಾಲೆಯಲ್ಲಿ ಈಗಾಗಲೇ ನೂರಾರು ಮಕ್ಕಳು ಕಲಿಯುತ್ತಿದ್ದಾರೆ.  ಶೀಘ್ರವಾಗಿ ಬೆಳೆಯುತ್ತಿರುವ ಪೂರ್ಣಪ್ರಮತಿ ತನ್ನ ಕನಸಿನ ಪೂರ್ಣ ಸಾಕಾರಕ್ಕಾಗಿ ವಿಶಾಲ ಹಾಗೂ ನಿರ್ಮಲ ಪರಿಸರವನ್ನು ಅರಸುತ್ತಿದೆ.

ಅದೊಂದು ಗಿಡ ಮರಗಳ ಸಂದೋಹ; ಗುರುಕುಲದ ವಾತಾವರಣ; ಆಟ-ಪಾಠದ ಆಧುನಿಕ ಕೊಠಡಿಗಳು; ಸಭಾಗೃಹಗಳು; ವಿದ್ಯಾರ್ಥಿನಿಲಯ; ವಸತಿ ಗೃಹಗಳು; ವಿಸ್ತಾರವಾದ ಆಟದ ಮೈದಾನ; ಧ್ಯಾನ ಮಂದಿರ; ಕಣ್ಣಿನ ಒಳಗೂ ಹೊರಗೂ ಕೊನೆಯನೆಂದೂ ಮುಟ್ಟದ ಭಾರತೀಯ ಮಕ್ಕಳ ಮುಗ್ಧ ಮನಸ್ಸುಗಳು.

ಈ ಭವ್ಯತೆ ಹಾಗೂ ಧನ್ಯತೆಗಳ ಸಾಂಗತ್ಯಕ್ಕಾಗಿ ಒಂದು ವಿಶಾಲವಾದ ಕೃಷಿಭೂಮಿ ಬೇಕು. ಬನ್ನಿ! ಈ ತಾಯ್ನಾಡಿನ ಮಕ್ಕಳಿಗಾಗಿ ದಿವ್ಯವಾದ ಆನಂದವನ ಕಟ್ಟೋಣ.

ಮುಂದೊಂದು ದಿನ ವ್ಯವಸ್ಥೆಯ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಭಾರತೀಯತೆಯನ್ನು, ಸಾಮಾಜಿಕತೆಯನ್ನು, ನಿಸ್ವಾರ್ಥ ಮೌಲ್ಯಗಳನ್ನು ಮನುಕುಲಕ್ಕೆ ಈ ಮಕ್ಕಳು ಉಣಬಡಿಸುತ್ತಾರೆ ಎಂಬ ಮಹತ್ವಾಕಾಂಕ್ಷೆ ಪೂರ್ಣಪ್ರಮತಿಯದು.

ಈ ಆನಂದವನದಲ್ಲಿ ಕೇವಲ ಶಾಲೆಯನ್ನಲ್ಲದೇ, ಉನ್ನತ ಅಧ್ಯಯನಕ್ಕಾಗಿಯೂ ಸಂಸ್ಥೆಯನ್ನು ಬೆಳೆಸಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಉನ್ನತ ಅಭ್ಯಾಸ ಹಾಗೂ ಸಂಶೋಧನೆಗಳಿಗಾಗಿಯೇ ಮೀಸಲಾದ ಅಂಗಸಂಸ್ಥೆಯೂ ಇಲ್ಲಿ ಬೆಳೆದುಬರಲಿದೆ. ಈಗಾಗಲೇ ದೇಶದ ಅನೇಕ ಗ್ರಂಥಾಲಯಗಳಿಂದ ಅಪ್ರಕಟಿತ ಹಸ್ತಪ್ರತಿಗಳನ್ನು ತಂದು ಪ್ರಕಾಶನ ಪಡಿಸಲಾಗಿದೆ. ಸಮಾಜದ ಎಲ್ಲ ಆಸಕ್ತರಿಗೂ ನಿಲುಕುವಂತೆ ಅನೇಕ ಕಾರ್ಯಾಗಾರಗಳನ್ನೂ, ಕಲಿಕೆಯ  ಔತಣಗಳನ್ನೂ ಇಲ್ಲಿ ಬಡಿಸಲಾಗುವುದು. ಭಗವದ್ಗೀತೆಯ ದೈನಂದಿನ ಒಳನೋಟ, ಸಾಮಾಜಿಕ ತತ್ತ್ವದರ್ಶನ, ಪ್ರಾಚೀನಭಾರತದ ವಿದ್ಯೆಗಳು, ವಿಜ್ಞಾನಿಗಳಿಗೆ ತತ್ತ್ವದರ್ಶನ, ದಾರ್ಶನಿಕರಿಗೆ ಆಧುನಿಕವಿಜ್ಞಾನ, ಆರಾಧಕರಿಗೆ ಭಕ್ತಿಯ ಕಲೆ ಮೊದಲಾದ ವಿಶೇಷ ಕಾರ್ಯಕ್ರಮಗಳನ್ನೂ ನಿಧಾನವಾಗಿ ಆರಂಭಿಸಲಾಗುವುದು. ಒಟ್ಟಾರೆ ಇದೊಂದು ಪರಿಪೂರ್ಣ ಕಲಿಕೆಯ ತಾಣ. ಎಲ್ಲ  ವಯಸ್ಸಿನವರಿಗೂ. ಎಲ್ಲ ಸ್ತರದಲ್ಲೂ.
ಇಂತಹ ಭೂಮಿಯನ್ನು ಕೊಳ್ಳುವುದಾಗಲೀ, ಅಲ್ಲಿ ಈ ಸಂಸ್ಥೆಯ ನಿರ್ಮಾಣವಾಗಲೀ ಒಬ್ಬಿಬ್ಬರ ಕೆಲಸವಲ್ಲ. ಬನ್ನಿ! ಇದೊಂದು ಮಹಾಯಜ್ಞ. ದ್ರವ್ಯಯಜ್ಞವೂ ಹೌದು. ಜ್ಞಾನಯಜ್ಞವೂ ಹೌದು. ಮಗುವೆಂಬ ಬೀಜವನ್ನು ಬಿತ್ತೋಣ. ಜೀವನವಿದ್ಯೆಯಿಂದ ಪೋಷಿಸೋಣ. ವೃಕ್ಷದ ಆಸರೆಯಲ್ಲಿ ಎಲ್ಲರೂ ಕಲಿಯೋಣ. ಆನಂದವನವನ್ನು ಕಟ್ಟೋಣ. ಎಲ್ಲವನ್ನೂ ಈ ತಾಯ್ನಾಡಿಗಾಗಿ ಅರ್ಪಿಸೋಣ.

–  ಕೃಷ್ಣಾರ್ಪಣ                       ಯಥಾಶಕ್ತಿ
–  ಬೀಜ ಅರ್ಪಣ                   ರೂ. ೧೦,೦೦೦
–  ಅಂಕುರ ಅರ್ಪಣ               ರೂ.೨೫,೦೦೦
–  ಸಸ್ಯ ಅರ್ಪಣ                    ರೂ. ೫೦,೦೦೦
–  ವೃಕ್ಷ ಅರ್ಪಣ                    ರೂ. à³§,೦೦,೦೦೦
–  ಮಹಾವೃಕ್ಷ ಅರ್ಪಣ          ರೂ. ೨,೦೦,೦೦೦
–  ಕಲ್ಪತರು ಅರ್ಪಣ             ರೂ. ೫,೦೦,೦೦೦
–  ಉದ್ಯಾನ ಅರ್ಪಣ            ರೂ. ೧೦,೦೦,೦೦೦
–  ಉಪವನ ಅರ್ಪಣ            ಒಂದು ಎಕರೆ ಅಥವಾ ಹೆಚ್ಚಿನ ಭೂಮಿಯ ಮೌಲ್ಯ