Menu

ತಣಿಯದ ಕುತೂಹಲ

[ಅಂಕಣ ಬರಹ – ೩]

ಮರುದಿನ ನೀಲಾಳಿಗೆ ನಾಚಿಕೆ ಮುಳ್ಳನ್ನು ಮೊದಲು ಕಂಡ ಜಾಗದಲ್ಲೆ ಕಾಣುವ ಮನಸ್ಸಾಯಿತು. ನಾಚಿಕೆ ಮುಳ್ಳನ್ನು ತನ್ನ ಊರಲ್ಲಿ ಕಂಡಿಲ್ಲ ಎಂದಲ್ಲ. ಆದರೆ ಈಗ ಅದರ ಮಹತ್ವವೆಲ್ಲ ಗೊತ್ತಾಗಿದೆ. ಈಗ ನೋಡಿವ ರೀತೆಯೇ ಬೇರೆಯಾಗಿದೆ. ನಮ್ಮ ಮನೆ ಬೀದಿಯ ಕೊನೆಯಲ್ಲೇ ಇರುವ ನಾಟಿ ಔಷಧಿಯ ಚಿಕ್ಕ ಗುಡಿಸಲನ್ನು ನೋಡೇ ಇರುವುದಿಲ್ಲ. ಬೇರೆ ಊರಿನ ಯಾರೋ ಒಬ್ಬರು ಬಂದು ನಿಮ್ಮ ಊರಿನಲ್ಲಿ ಒಬ್ಬ ಒಳ್ಳೆಯ ನಾಟಿ ವೈದ್ಯರಿದ್ದಾರೆ ಎಂದಾಗ, ಹೌದಾ, ನಮ್ಮ ಊರಿನಲ್ಲಾ, ಏನು ಅವರ ಹೆಸರು, ಇರುವುದೆಲ್ಲಿ? ಎಂದು ಕೇಳುವೆವು. ವಿಳಾಸ ಎಲ್ಲಾ ಹೇಳಿದಾಗ ‘ಹೌದು, ನಮ್ಮ ಬೀದಿಯ ಕೊನೆಯಲ್ಲೇ ಇದೆ, ಒಂದು ಗುಡಿಸಲು, ಅದೇನಾ?’ ಎಂದು ಆಶ್ಚರ್ಯದಿಂದ ಕೇಳುತ್ತೇವೆ. ಆಮೇಲೆ ಬೀದಿ ಕೊನೆಯ ಗುಡಿಸಲು ನಾಟಿ ವೈದ್ಯರ ಬಗ್ಗೆ ಒಂದು ತುಂಬು ಭಾವನೆಯು ಬರುವುದು. ಭಗವಂತನ ಗುಣಗಳನ್ನು, ಮಹಿಮೆಯನ್ನು ಅರಿತಾಗ ಮೂಡುವ ಭಕ್ತಿ ಇಮ್ಮಡಿಯಾಗುವಂತೆ ನಮ್ಮ ಸುತ್ತಲಿರುವ ಗಿಡಗಳ ಔಷಧಿಯ ಗುಣಗಳನ್ನು ಅರಿತಾಗ ಅವುಗಳನ್ನು ಕಾಣುವ ಕಣ್ಣು ಬೇರೆಯೇ ಆಗುವುದು.

ಹಾಗೆಯೇ ನೀಲಾಳಿಗೆ ಈಗ ನಾಚಿಕೆ ಮುಳ್ಳನ್ನು ನೋಡುವುದರಲ್ಲಿ ಏನೋ ಆನಂದವಾಗುತ್ತಿದೆ. ಬೆಳಗ್ಗೆ ಸುಮಾರು  à³®.೦೦ ಗಂಟೆಯ ಸಮಯಕ್ಕೆ ನೀಲಾ ಯಥಾ ಪ್ರಕಾರ ಹಸುಗಳನ್ನು ಮೇಯಿಸಲು ಹೊರಡಲು ಮನೆಯಿಂದ ಹೊರಬಂದಳು. ಅಷ್ಟರಲ್ಲಿ ಬೀದಿಯಲ್ಲಿ ನಡೆಯುತ್ತಿದ್ದ ಒಂದು ದೊಡ್ಡ ಗಲಾಟೆ ಕೇಳಿಸಿತು. ಅದೇನೆಂದು ನೋಡಲು ಅಲ್ಲಿಗೆ ಓಡಿ ಹೋದಳು. ನೋಡಿದರೆ ಬಸಪ್ಪ ತನ್ನ ಹೆಂಡತಿಯನ್ನು ಹಿಡಿದುಕೊಂಡು ಹೊಡೆಯುತ್ತಿದ್ದಾನೆ. ಅವನ ಅಮ್ಮ ಬಿಡಿಸಲು ಹೋದರೂ ಕೇಳದೆ ಹೊಡೆಯುತ್ತಿದ್ದ. ನೀಲಾಳಿಗೆ ಇದು ಬಹಳ ಹೊಸದಾದ ಸನ್ನಿವೇಶ. ಗಂಡ  ಹೆಂಡತಿಯನ್ನು ಹೊಡೆಯುವುದನ್ನು ಅವಳು ಎಂದೂ ಕಂಡೆ ಇರಲಿಲ್ಲ. ಧೈರ್ಯವಾಗಿ ಮುಂದೆ ಹೋಗೆ ಕಾರಣವೇನೆಂದು ಕೇಳಿದಳು. ಕೋಪದಲ್ಲಿದ್ದ ಬಸಪ್ಪ ನಿನಗ್ಯಾಕಮ್ಮ ಆ ವಿಚಾರ, ಸುಮ್ಮನೆ ಹೋಗು, ಹೊಸದಾಗಿ ನಮ್ಮೂರಿಗೆ ಬಂದಿದ್ದೀಯ ಎಂದು ಗದರಿಸಿದ. ನೀಲಾ ಕುತೂಹಲ ತಡೆಯದೆ ಮತ್ತೆ ಕಾರಣವನ್ನು ಕೇಳಿದಳು. ಆಗ ಅವರ ಅಮ್ಮ ‘ಅಯ್ಯೋ ಮನೆಯಲ್ಲಿ ಈಗಾಗಲೆ ೫ ಮಕ್ಕಳು ಇದ್ದಾರೆ, ಈಗ ಸುಬ್ಬಿ ಮತ್ತೆ ಬಸುರಿಯಾಗಿದ್ದಾಳೆ, ಅದಕ್ಕೆ ಅವಳನ್ನು ನಮ್ಮ ಬಸಪ್ಪ ಹೊಡೆಯುತ್ತಿದ್ದಾನೆ’ ಎಂದು ಗೊಳೋ ಎಂದು ಅತ್ತಳು. ನೀಲಾಳಿಗೆ ಆಶ್ಚರ್ಯವಾಯಿತು. ಮಕ್ಕಳೆಂದರೆ ಎಲ್ಲರೂ ಖುಷಿಪಡಬೇಕಲ್ಲ, ಇವನ್ಯಾಕೆ ಹೊಡೆಯುತ್ತಿದ್ದಾನೆ ಎಂದು. ಮತ್ತೆ ಅಮ್ಮನನ್ನು ಕೇಳಿದಳು, ‘ಇದರಲ್ಲಿ ಹೊಡೆಯುವ ವಿಷಯ ಏನಿದೆ? ಖುಷಿಪಡಬೇಕಲ್ಲ?’ ಎಂದು. ಅದಕ್ಕೆ ಅವರ ಅಮ್ಮ ಹೇಳಿದರು ‘ಇರುವ ಐದು ಮಕ್ಕಳಿಗೇ ಊಟಕ್ಕೆ ಬಟ್ಟೆಗೆ ಇಲ್ಲ, ಇನ್ನು ಆರನೆಯ ಮಗು ಬಂದರೆ ಉಪವಾಸವಿದ್ದು ಸಾಯಬೇಕಷ್ಟೆ’ ಎಂದು ಅತ್ತಳು.

ಈಗ ನೀಲಾಳಿಗೆ ಸಮಸ್ಯೆ ಅರ್ಥವಾಯಿತು. ಅಲ್ಲಿಂದ ಹೊರಟು ಮನೆಗೆ ಬಂದಳು. ಅಲ್ಲಿ ಒಂದು ಬೆಕ್ಕು ನೆನ್ನೆ ತಾನೆ ಹಾಕಿದ್ದ ತನ್ನ ೬ ಮರಿಗಳಿಗೆ ಹಾಲುಣಿಸುತ್ತಿದ್ದುದನ್ನು ಕಂಡಳು. ಅವಳಿಗೆ ಆನಂದವಾಯಿತು. ಅತ್ತೆಯ ಬಳಿ ಬಂದು ಬೀದಿಯಲ್ಲಿ ನಡೆದ ಜಗಳವನ್ನು ಹೇಳಿದಳು. ಅತ್ತೆ ಸುಶೀಲಮ್ಮ ‘ಅಯ್ಯೋ, ಆ ಬಸಪ್ಪನದ್ದು ಯಾವಾಗಲೂ ಇದ್ದದ್ದೇ, ಎಲ್ಲಾ ತಪ್ಪು ಸುಬ್ಬಿಯದ್ದೆ ಎನ್ನುವ ರೀತಿಯಲ್ಲಿ ಆಡ್ತಾನೆ, ಅವನಿಗೆ ಬುದ್ಧಿ ಇಲ್ಲವಾ, ಮಕ್ಕಳನ್ನು ಸಾಕುವ ಯೋಗ್ಯತೆ ಇಲ್ಲ ಎಂದ ಮೇಲೆ ಮಕ್ಕಳು ಯಾಕೆ ಬೇಕು? ಈಗ ಅವಳು ಬಸುರಿ ಎಂದು ತಿಳಿದ ನಂತರ ತೆಗೆಸಿಕೊಳ್ಳಲು ಹೇಳುತ್ತಾನೆ, ಪಾಪಾ ಅವಳ ಮನಸ್ಸು ಹೇಗಾಗಿರಬೇಕು, ಅವಳು ಮೂಕ ಪ್ರಾಣಿಯಂತೆ ಸುಮ್ಮನೆ ನೋವು ನುಂಗುತ್ತಾಳೆ, ಇದು ಇದ್ದದ್ದೆ ಬಿಡು, ನೀನು ಹಸು ಮೇಯಿಸಲು ??ಗಿ?ಲಿಲ್ಲವಾ?’ ಎಂದು ಕೇಳಿದಳು.

ಕೂಡಲೆ ನೀಲಾ ಬಸಪ್ಪನ ಮಕ್ಕಳನ್ನು ಮತ್ತು ಬೆಕ್ಕಿನ ಮಕ್ಕಳನ್ನು ಒಮ್ಮೆಲೆಗೆ ಕಣ್ಣ ಮುಂದೆ ತಂದುಕೊಂಡಳು. ಪ್ರಾಣಿ ಪ್ರಪಂಚದಲ್ಲಿ ೫-೬ ಮಕ್ಕಳು ಸಹಜ ಆದರೆ ಮನುಷ್ಯರಲ್ಲಿ ಇದು ದುಬಾರಿ. ಹಾಗಾದರೆ ಸಸ್ಯ ಪ್ರಪಂಚದಲ್ಲಿ ಹೇಗಿರಬೇಕು ಎಂದು ಚಿಂತಿಸಿದಳು. ಇವಳು ಇದ್ದಕ್ಕಿದ್ದಂತೆ ಎಲ್ಲೋ ಕಳೆದು ಹೋದದ್ದನ್ನು ಕಂಡು ಸುಶೀಲಮ್ಮ ಎಚ್ಚರಿಸಿ ‘ಹೊರಡಮ್ಮ, ಹೊರಡು ಬಿಸಿಲಾಗುವ ವೇಳೆಗೆ ಬರುವಿಯಂತೆ ಹೊರಡು’ ಎಂದು ಕಳುಹಿಸಿದಳು. ನಿನ್ನೆ ನೋಡಿದ್ದ ನಾಚಿಕೆ ಮುಳ್ಳಿನೊಂದಿಗೆ ಇನ್ನೇನೋ ಹುಡುಕುವ ಕಣ್ಣಿನೊಂದಿಗೆ ನೀಲಾ ಕಾಡಿನ ದಾರಿ ಹಿಡಿದಳು.

ಇದೀಗ ನಿಮ್ಮ ಕೆಲಸ: ಒಮ್ಮೆಲೆಗೆ ಅನೇಕ ಮಕ್ಕಳನ್ನು ಪಡೆಯುವ ಪ್ರಾಣಿಗಳ ಪಟ್ಟಿಯನ್ನು ತಯಾರು ಮಾಡಿರಿ. ಮುಂದಿನ ತಿಂಗಳ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Yallappa Reddy